
ಕೊಪ್ಪಳ : ನದಾಫ್- ಪಿಂಜಾರ್ ಸಮಾಜ ಪ್ರತಿಯೊಬ್ಬರೂ ಮಕ್ಕಳನ್ನು ಶೈಕ್ಷಣಿಕವಂತರಾಗಿ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಹೇಳಿದರು.
ಅವರು ಶನಿವಾರದಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ ಶಿವಮೊಗ್ಗ, ಕೊಪ್ಪಳ ಗ್ರಾಮೀಣ ಘಟಕದಿಂದ ಉಚಿತ ಕನ್ನಡಕ ವಿತರಣೆ, ಸ್ಮಾರ್ಟ್ ಕಾರ್ಡ್ ವಿತರಣೆ, ತಾಲೂಕು ಮತ್ತು ಜಿಲ್ಲೆಯಿಂದ 2025 ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಕೊಪ್ಪಳ ನಗರ ಘಟಕದ ಸದಸ್ಯರ ಮಾನ್ಯತಾ ಪತ್ರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಬಡ ವಿದ್ಯಾರ್ಥಿಗಳನ್ನು ದತ್ತಕ್ಕೆ ತೆಗೆದುಕೊಂಡು ಆ ವಿದ್ಯಾರ್ಥಿಯ ಶೈಕ್ಷಣಿಕ ಅಭಿವೃದ್ಧಿಗೆ ಸಮಾಜ ಶ್ರಮಿಸಬೇಕು, ನಂತರ ವಿದ್ಯಾರ್ಥಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾನೆ ಎಂದ ಅವರು ನದಾಫ್ ಪಿಂಜಾರ ಸಮಾಜವು ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಇತರ ಸಮಾಜಗಳ ಪ್ರೀತಿಯನ್ನು ಗಳಿಸಿದ ಸಮಾಜ, ಈ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲಿ ಎಂದರು.
ರಾಜ್ಯ ಕೋಶ್ಯಾಧ್ಯಕ್ಷ ಶಹಬ್ಬುದ್ದೀನ್ ಸಾಬ್ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳು, ಸಂಘದ ಸಮಾಜಮುಖಿ ಕಾರ್ಯಗಳ ಕುರಿತು ತಿಳಿಸಿದರು.
ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ ಮಾತನಾಡಿ ಸಂಘ ಸಮಾಜ ಮುಖಿ ಕಾರ್ಯಗಳತ್ತ ಮುನ್ನಡೆಯಲಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ ಅವರು ಸಂಘಕ್ಕೆ ಸದಾ ಸಹಾಯ ಸಹಕಾರ ಇದೆ, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕು ನದಾಫ್ ಪಿಂಜಾರ್ ಸಮಾಜದ ಅಧ್ಯಕ್ಷ ಅಸ್ಮಾನ್ ಸಾಬ್ ವಹಿಸಿದ್ದರು.
ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾ ನದಾಫ್ ಪಿಂಜಾರ ಸಮಾಜದ ಅಧ್ಯಕ್ಷ ಕಾಶೀಂಅಲಿ ಮುದ್ದಾಬಳ್ಳಿ, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶಾ, ವಿಜಯನಗರ ಜಿಲ್ಲಾಧ್ಯಕ್ಷ ಪಿ. ಹೊನ್ನೂರ್ ಸಾಬ್, ಕೊಪ್ಪಳ ತಾಲೂಕು ಉಪಾಧ್ಯಕ್ಷ ಫಕ್ರು ಸಾಬ್ ನದಾಫ್, ಶಿಕ್ಷಕರಾದ ಕಾಸಿಂಸಾಬ್ ಸಂಕನೂರ, ಅಲ್ಪಾ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಸಲೀಮಾ ಜಾನ್, ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದರಿಮೋತಿ, ತಾಲೂಕು ಉಪಾಧ್ಯಕ್ಷ ಮುರ್ತಜಸಾಬ ಚುಟ್ಟದ, ತಾಲೂಕು ಕಾರ್ಯದರ್ಶಿ ಮುಸ್ತಫಾ ಕುದರಿ ಮೋತಿ, ತಾಲೂಕ ಸಹ ಕಾರ್ಯದರ್ಶಿ ಶಕೀರ್ ನದಾಫ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.