
ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಂದುವರಿಸಲು ಅಮರೇಗೌಡ ಪಾಟೀಲ್ ಬಯ್ಯಾಪುರ ಮನವಿ
ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಂದುವರಿಸಲು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರಿಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಮನವಿ ಮೂಲಕ ಒತ್ತಾಯಿಸಿ ಸಂಬಂಧಿಸಿದವರಿಗೆ ಶಿಫಾರಸ್ ಮಾಡುವಂತೆ ತಿಳಿಸಿದ್ದಾರೆ.
ದಿ.14.02.20250 ಮಾಧ್ಯಮಗಳಲ್ಲಿ ವಿವಿ ಮುಚ್ಚಲು ತೀರ್ಮಾನ ಎಂಬ ಶೀರ್ಷಿಕೆಯಡಿ ಬಿತ್ತರವಾದ ಸುದ್ದಿಯು ಕೊಪ್ಪಳ ಜಿಲ್ಲೆಯ ಜನತೆಗೆ ನೋವುಂಟಾಗಿದೆ. ಬಡತನದಿಂದ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮರೆತು ಗುಳೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಹೈದ್ರಾಬಾದ ಕರ್ನಾಟಕದ ಹಿಂದುಳಿದ ಪ್ರದೇಶದಲ್ಲಿನ ನಂಜುಂಡಪ್ಪನವರ ವರದಿಯಂತೆ ಹಿಂದುಳಿದ ಪ್ರದೇಶದಲ್ಲಿರುವ ನಾವುಗಳು, ನಮ್ಮ ಮಕ್ಕಳ ಹಿತದೃಷ್ಟಿಯಿಂದ ದೂರದ ಬಳ್ಳಾರಿ, ಧಾರವಾಡ, ಕಲಬುರಗಿ, ಬೆಂಗಳೂರು ಇನ್ನಿತರ ನಗರಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ತೊಂದರೆಯನ್ನು ತಪ್ಪಿಸಲು ಕೊಪ್ಪಳ ವಿಶ್ವವಿದ್ಯಾಲಯವು ನಮಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದೆ.
ಈಗಾಗಲೇ 40 ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 15 ಸಾವಿರ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಆಶಯದಂತೆ ಉನ್ನತ ಶಿಕ್ಷಣದ ಪ್ರಗತಿಗೆ ಕೊಪ್ಪಳ ವಿಶ್ವವಿದ್ಯಾಲಯದಿಂದ ಬಡತನದ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತಾಗಿದೆ. ಕಾರಣ ಕೊಪ್ಪಳ ವಿಶ್ವವಿದ್ಯಾಲಯ ವನ್ನು ಯಥಾವತ್ತಾಗಿ ಮುಂದುವರಿಸಲು ಸಂಬಂಧಿಸಿದವರಿಗೆ ಶಿಫಾರಸ್ಸು ಮಾಡುವಂತೆ ತಿಳಿಸಿದ್ದಾರೆ.