ಕೊಪ್ಪಳ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯು ಕೊಪ್ಪಳ ನಗರದ ಸಮಾಜ ಸೇವಕರು, ಸಹಕಾರಿ ರಂಗದ ಹರಿಕಾರರು, ಸರಳ ಸ್ನೇಹಜೀವಿ ಮಾತೃ ಹೃದಯದ ಧೀಮಂತ ವ್ಯಕ್ತಿತ್ವದ ನೀಲಕಂಠಯ್ಯ ಹಿರೇಮಠ ಅವರು ಸಹಕಾರಿ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಸಹಕಾರ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಇದೇ ದಿನಾಂಕ ಜನೆವರಿ 11ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ(ರವೀಂದ್ರ ಕಲಾಕ್ಷೇತ್ರ ಆವರಣ) ಜರುಗುವ 74ನೇ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ, ಬುದ್ಧ ಬಸವ ಅಂಬೇಡ್ಕರ್ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ನೀಲಕಂಠಯ್ಯ ಹಿರೇಮಠ ಅವರಿಗೆ ರಾಷ್ಟ್ರೀಯ ಸಹಕಾರ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸುವರು.
ಇದೇ ಸಂದರ್ಭದಲ್ಲಿ ಸಂಘಟನೆ, ಸಮಾಜ ಸೇವಕ ಬಸವರಾಜ್ ಚಿಲುವಾಡಗಿ ಅವರಿಗೆ ಬಸವ ಶಿರೋಮಣಿ ರಾಷ್ಟ್ರ ಪ್ರಶಸ್ತಿ, ಯುವ ಮುಖಂಡ ಮುನೀರ್ ಅಹ್ಮದ್ ಸಿದ್ದಕಿ ಅವರಿಗೆ ಅಂಬೇಡ್ಕರ್ ರಾಷ್ಟ್ರೀಯ ಸದ್ಭಾವನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉಡುಪಿಯ ದೊಡ್ಡಣ್ಣಗುಡ್ಡೆ ಮಹಾಸಂಸ್ಥಾನದ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ವಹಿಸುವರು.
ಬೆಳಗಾವಿಯ ಚಿಪ್ಪಲಕಟ್ಟಿ ಹಿರೇಮಠದ ಡಾ.ಕಲ್ಮೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭೆಯ ಮಾಜಿ ಸದಸ್ಯ ವಿ ಎಸ್ ಉಗ್ರಪ್ಪ ನೆರವೇರಿಸುವರು, ಹಿರಿಯ ಪತ್ರಕರ್ತರು ಸಾಹಿತಿ ಡಾ.ಎಂ ಲಕ್ಷ್ಮೀನಾರಾಯಣ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸುವರು.
ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಪ್ರಧಾನ ಮಾಡುವರು, ವಿಚಾರ ಸಂಕೀರ್ಣದ ಅಧ್ಯಕ್ಷತೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಡೀನ್ ಕಲಾನಿಕಾಯ ಪ್ರೊಫೆಸರ್ ಎಚ್ ಟಿ ಪೋತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟಿ ಮೀನಾ, ಹಿರಿಯ ಸಾಹಿತಿ ಡಾ. ಅಶೋಕ್ ನರೋಡೆ,ಡಾ.ಚಿಕ್ಕ ಹೆಜ್ಜಾಜಿ, ಏಕೆ ಜಯದೇವ್, ಜಿ.ಎಸ್ ಗೋನಾಳ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ಕಾರ್ಯಕ್ರಮದ ಸಂಘಟಕರಾದ ರಮೇಶ್ ಸುರ್ವೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
