
ಕೊಪ್ಪಳ: ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯ ಮಹಿಳಾ ಪಿ.ಡಿ.ಓ. ರತ್ನಮ್ಮ ಗುಂಡಣ್ಣವರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೌಕರರಾದ ಸಚಿನ್ ಮತ್ತು ನಾಗರಾಜ್ ರವರ ಮೇಲೆ ಮಾರಣಾಂತಿಕ ದೈಹಿಕ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರ ಸಂಘ ಖಂಡಿಸಿ ಸೂಕ್ತ ಕ್ರಮಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರತ್ನಮ್ಮ ಗುಂಡಣ್ಣವರ್ ಸರ್ಕಾರಿ ಕರ್ತವ್ಯದ ನಿಮಿತ್ಯ ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಸಲುವಾಗಿ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗೂ ಸಾರ್ವಜನಿಕರು ಸಮ್ಮುಖದಲ್ಲಿ ಚರ್ಚೆ ಮಾಡುತ್ತಿರುವಾಗ ಅದೇ
ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿ ವಡ್ಡರ್ ಅವರ ಮಗನಾದ ಭೀಮೇಶ್ ಬಂಡಿವಡ್ದರ್ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಪಂಚಾಯತ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ದೈಹಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವುದನ್ನು ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ.
ಹಾಗೂ ಚಿಕ್ಕಸಿಂಧೋಗಿ ಸೀಮಾದಲ್ಲಿರುವ ಹೀರೇಹಳ್ಳದಲ್ಲಿ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವಾಗ ಮರಳನ್ನು ಆಕ್ರಮವಾಗಿ ಸಾಗಿಸುತ್ತಿರುವುದನ್ನು ಖಚಿತ ಪಡಿಸಿಕೊಂಡು ಕಾನೂನಿನ ಕ್ರಮ ಜರುಗಿಸಲು ಮುಂದಾದಾಗ ಗುಡದಪ್ಪ ತಂ ನಿಂಗಪ್ಪ ಚಿಕ್ಕಸಿಂಧೋಗಿ, ಯಲ್ಲಪ್ಪ ತಲ್ಲೂರು ಚಿಕ್ಕೇನಕೊಪ್ಪ, ಶಬ್ಬಿರಸಾಬ್ ಜಾಫರ್ ಸಾಬ್ ಚಿಕ್ಕಸಿಂಧೋಗಿ, ಮಲ್ಲಪ್ಪ ಚಿಕ್ಕಸಿಂಧೋಗಿ, ವೀರಯ್ಯ ಕಲ್ಲಯ್ಯ ಚಿಕ್ಕಸಿಂದೋಗಿ ಇವರುಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೌಕರರಾದ ಸಚಿನ ವಾಹನ ಚಾಲಕರು ಮತ್ತು ನಾಗರಾಜ ಜಿಯೋಲಾಜಿಸ್ಟ ಇವರುಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಬಟ್ಟೆ ಹರಿದು, ಜೀವ ಬೆದರಿಕೆ ಹಾಕಿರುತ್ತಾರೆ.
ಈ ಮೇಲಿನ ಎರಡು ಪ್ರಕರಣಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಜಿಲ್ಲೆಯಲ್ಲಿ ಕಳೆದ 5-6 ವರ್ಷಗಳಿಂದ ಇಂತಹ ಪ್ರಕರಣಗಳು ಕಂಡು ಬಂದಿರುವುದಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಸಾರ್ವಜನಿಕರ ಜೊತೆಗೆ ಸೌಹಾರ್ದಯುತವಾಗಿ ವರ್ತಿಸಿ, ಕಾನೂನು ಪಾಲಿಸಲು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ನೌಕರರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇವೆ. ಹಾಗೂ ಹಲ್ಲೆಗೊಳಗಾತದ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಲು ವಿನಂತಿಸಿಕೊಳ್ಳುತ್ತೇವೆ.
ಇಂತಹ ಪ್ರಕರಣಗಳು ರಾಜ್ಯಾದ್ಯಂತ ಕಂಡು ಬರುತ್ತಿದ್ದು ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಗ್ಗಿಸಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆಯಾದ ಸಂದರ್ಭದಲ್ಲಿ ಕಠಿಣ ಕಾನೂನು ರೂಪಿಸಿದ ಮಾದರಿಯಲ್ಲಿಯೇ ಎಲ್ಲಾ ನೌಕರರಿಗೆ ಅನ್ವಯಿಸುವಂತೆ ಕಠಿಣ ಕಾನೂನು ರೂಪಿಸಿ ಸರ್ಕಾರಿ ನೌಕರರು ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಸರಕಾರಿ ನೌಕರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷ ನಾಗರಾಜ.ಆರ್ ಜುಮ್ಮನ್ನವರ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಆಸಿಫ್ ಅಲಿ, ಜಿಲ್ಲಾ ಖಜಾಂಚಿ ಜಯತೀರ್ಥ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ,ಎನ್.ಮಂಜುನಾಥ್, ನಾಗರಾಜ್ ಕುಷ್ಟಗಿ, ಪಿಎಸ್ ಅಮರದೀಪ್, ಅಶೋಕ್ ರಾಂಪುರ್ ಸೇರಿದಂತೆ ಅನೇಕ ಸರ್ಕಾರಿ ನೌಕರರು ಒತ್ತಾಯಿಸಿ ಮನವಿ ಸಲ್ಲಿಸಿದರು.