July 28, 2026
IMG_20260624_170315

ತುಂಗಭದ್ರಾ ಜಲಾಶಯ ಕ್ರೆಸ್ಟ್ ಗೇಟ್ ಉದ್ಘಾಟನೆಗೆ ಆಗಮಿಸುವ ನಾಯಕರಿಗೆ ಕೊಪ್ಪಳ ಜನರ ಪರವಾಗಿ ಸ್ವಾಗತ

ಜಿಲ್ಲೆಯ ನೀರಾವರಿಗೆ ಬಲ ತುಂಬಿ: ಸಂಗಣ್ಣ ಕರಡಿ

ಕೊಪ್ಪಳ: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ 33 ಕ್ರಸ್ಟ್ ಗೇಟ್ ಗಳ ಉದ್ಘಾಟನೆಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಶಿವಕುಮಾರ ಹಾಗೂ ಆಂಧ್ರ ಪ್ರದೇಶ ಸಿಎಂ ಚಂದ್ರು ಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಸೇರಿ ವಿವಿಧ ಎಲ್ಲ ನಾಯಕರಿಗೂ ಹೃದಯ ಪೂರ್ವಕ ಸ್ವಾಗತ. ಟಿಬಿ ಡ್ಯಾಂ ಗೆ ಆದ್ಯತೆ ನೀಡಿದಂತೆ ಸಿಂಗಟಾಲೂರು, ಹಿರೇಹಳ್ಳ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಅನ್ನದ ಬಟ್ಟಲು ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಗಳನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಇದಲ್ಲದೇ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ 32 ಟಿಎಂಸಿ ಹೂಳಿಗೆ ಪರ್ಯಾಯವಾಗಿ ನಿರ್ಮಿಸಲು ಉದ್ದೇಶಿಸಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ನನೆಗುದಿಗೆ ಬಿದ್ದಿದೆ. ಡಿಪಿಆರ್ ತಯಾರಾಗಿದ್ದರೂ ಯೋಜನೆ ಕಾರ್ಯಗತವಾಗುತ್ತಿಲ್ಲ. ಇದೀಗ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳು ಒಂದೇ ವೇದಿಕೆಗೆ ಬಂದು ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಉದ್ಘಾಟಿಸುತ್ತಿರುವುದರಿಂದ ಇದೇ ವೇಳೆ ನವಲಿ ಸಮಾನಾಂತರ ಜಲಾಶಯದ ಕುರಿತು ನಿಲುವು ತಿಳಿಸಿ, ಯೋಜನೆ ಅನುಷ್ಟಾನಕ್ಕೆ ಮುಂದಾಗಬೇಕೆಂಬುದು ಜನರ ಒತ್ತಾಸೆಯಾಗಿದೆ ಎಂದಿದ್ದಾರೆ.
ಇನ್ನೂ ಆಲಮಟ್ಟಿಯಿಂದ ಕೆರೆ ತುಂಬಿಸುವ ಯೋಜನೆ ಆರಂಭವಾಗಿದ್ದು, ಶ್ಲಾಘನೀಯ. ಹೀಗಾಗಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದಲ್ಲಿ ರೈತರ ವರ್ಗಕ್ಕೆ ಇನ್ನಷ್ಟು ಅನುಕೂಲವಾಗಲಿದೆ. ಇದಲ್ಲದೇ ತುಂಗಭದ್ರಾ ಜಲಾಶಯಕ್ಕೆ ಹೋಲಿಕೆ ಮಾಡಿದರೇ ಆಲಮಟ್ಟಿ ಜಲಾಶಯಕ್ಕೆ ಒಂದು ತಿಂಗಳು ಮುಂಚಿತವಾಗಿ ಒಳ ಹರಿವು ಬರುವುದರಿಂದ ಆಲಮಟ್ಟಿ ಜಲಾಶಯದಿಂದ ನದಿಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಳಕೆ ಮಾಡುವ ನಿಟ್ಟಿನಲ್ಲಿ ತುಂಗಭದ್ರಾ ಜಲಾಶಯಕ್ಕೆ ಆಲಮಟ್ಟಿಯಿಂದ ನೀರು ಬರುವಂತೆ ಸರಕಾರ ಮಾಡಬೇಕಿದೆ. ಇದಕ್ಕಾಗಿ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳನ್ನು ಜೋಡಿಸುವ ಕಾರ್ಯಕ್ಕೂ ಸರಕಾರ ಮುಂದಾದಲ್ಲಿ ಭವಿಷ್ಯದಲ್ಲಿ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.

ಸಿಂಗಟಾಲೂರ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೂ ಆದ್ಯತೆ ನೀಡಿ:
ಕೊಪ್ಪಳ ಜಿಲ್ಲೆಯ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸುವ ಯೋಜನೆ ಸಮಪರ್ಕವಾಗಿ ಅನುಷ್ಟಾಗೊಳಿಸಬೇಕು. ಇದರೊಂದಿಗೆ ಕೊಪ್ಪಳ ತಾಲೂಕಿನ ಪ್ರಮುಖ ನೀರಾವರಿ ಯೋಜನೆಯಾಗಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೂ ಆದ್ಯತೆ ನೀಡಬೇಕಿದೆ.
ಈ ಯೋಜನೆ ಅನುಷ್ಟಾನಗೊಳ್ಳದ ಪರಿಣಾಮ ರೈತರು ತಮ್ಮ ಭೂಮಿಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಹತ್ವಾಕಾಂಕ್ಷೆಯುಳ್ಳ ಸದರಿ ಯೋಜನೆ ಅನುಷ್ಟಾನಗೊಂಡರೇ ರೈತರ ಬದುಕು ಹಸನಾಗಲಿದೆ ಎಂದು ತಿಳಿಸಿದ್ದಾರೆ.

ಹಿರೇಹಳ್ಳ ಕಾಲುವೆಗೆ ಬೇಕಿದೆ ಕಾಯಕಲ್ಪ:
ಕೊಪ್ಪಳದ ಹಿರೇಹಳ್ಳದ ಎಡ ಮತ್ತು ಬಲ ಕಾಲುವೆಗಳು ಭಾಗಶಃ ಹಾಳಾಗಿದ್ದು, ಕಾಲುವೆಗಳ ನವೀಕರಣಕ್ಕೆ ರಾಜ್ಯ ಸರ್ಕಾರ ಹಣ ಮೀಸಲಿಡಬೇಕು. ಶೀಘ್ರವೇ ಕಾಮಗಾರಿ ಆರಂಭಿಸಿ ರೈತರಿಗೆ ನಮ್ಮ ಸರ್ಕಾರ ಅನುಕೂಲ ಮಾಡಿಕೊಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆದ್ಯತೆ ನೀಡಬೇಕು ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಮನವಿ ಮಾಡಿದ್ದಾರೆ.

  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿ ಹಲವಾರು ಮಹತ್ತರ ಕಾರ್ಯಗಳನ್ನು ಮಾಡಿದ್ದು, ಇದೀಗ ಸಿಎಂ ಅವಧಿಯಲ್ಲಿ ನವಲಿ ಸಮಾನಾಂತರ ಜಲಾಶಯ, ಸಿಂಗಟಾಲೂರು, ಹಿರೇಹಳ್ಳ ಹಾಗೂ ವಿಮಾನ ನಿಲ್ದಾಣ ಮಾಡಿಕೊಡಬೇಕು ಎಂದು ಕೊಪ್ಪಳ ಜನತೆ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.
– ಸಂಗಣ್ಣ ಕರಡಿ, ಮಾಜಿ ಸಂಸದರು ಹಾಗೂ ಕಾಂಗ್ರೆಸ್ ನಾಯಕರು‌.

Leave a Reply

Your email address will not be published. Required fields are marked *